ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವ ಹಾಗೂ ವಿಚಿಕಿತ್ಸಕ ಮನೋಭಾವದ ಫಲವಾಗಿ ಉನ್ನತ ಜೀವನ ಮೌಲ್ಯಗಳ ಆದರ್ಶವನ್ನು ಶಿಕ್ಷಣ ರಂಗಕ್ಕೆ ತಳಹದಿಯನ್ನಾಗಿ ಮಾಡುವ ಉದ್ದೇಶದಿಂದ 'ರತ್ನಮಾನಸ' ಸಂಸ್ಥೆ ರೂಪುಗೊಂಡಿದೆ. ದೇಶ-ವಿದೇಶಗಳ ಶಿಕ್ಷಣ ತಜ್ಞರು, ಸಮಾಜ ಸುಧಾರಕರು ಹಾಗೂ ಆದರ್ಶವಾದಿಗಳ ಗಮನವನ್ನು ಸೆಳೆದಿರುವ ಈ ಸಂಸ್ಥೆಯ ವೈಶಿಷ್ಟ್ಯವೆಂದರೆ ಇಲ್ಲಿನ ಬಾಲಕರು ಸ್ಥಳೀಯ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುವುದರೊಂದಿಗೆ ದಿನದ ೨೪ ಗಂಟೆಗಳಲ್ಲಿಯೂ ಆಟ, ಪಾಠ, ಊಟ, ನಿದ್ರೆ, ಕೃಷಿ, ಹೈನುಗಾರಿಕೆ ಮೊದಲಾದ ಕರ್ತವ್ಯಗಳ ಬಗ್ಗೆ ಖಚಿತವಾದ ವೇಳಾಪಟ್ಟಿಯ ಪ್ರಜ್ಞಾವಂತರು. == ಸಾಂಪ್ರದಾಯಿಕ ಶಿಕ್ಷಣದೊಂದಿಗೆ ಜೀವನದ ಮೌಲ್ಯಗಳು == ಸ್ವ-ಉದ್ಯೋಗಕ್ಕೆ ಮಾರ್ಗದರ್ಶನ ನೀಡುವುದರಿಂದಾಗಿ ಮಕ್ಕಳ ದೈಹಿಕ, ಮಾನಸಿಕ ಹಾಗೂ ಸರ್ವಾಂಗೀಣ ಪ್ರಗತಿಯ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಎಲ್ಲಾ ಜಾತಿ-ಮತ-ಧರ್ಮಗಳ ಸಾರ ಸರ್ವಸ್ವಕ್ಕೆ ಮಹತ್ವವನ್ನು ನೀಡಿ, ಸರ್ವಧರ್ಮ ಸಮನ್ವಯ ಉದಾತ್ತ ಆಸ್ತಿವಾದ ಮೇಲೆ ವ್ಯಕ್ತಿತ್ವವು ಅರುಳುವಂತೆ ಮಾಡಲಾಗುತ್ತದೆ. == ಕ್ರಾಂತಿಕಾರಿಯಾದ ಶಿಕ್ಷಣ ವಿಧಾನ == ಕಲಿಕೆಯೊಂದಿಗೆ ಗಳಿಕೆಯ ಆದರ್ಶದಂತೆ ಶ್ರಮ, ಗೌರವದ ಮಹತ್ವವನ್ನರಿತ ಮಕ್ಕಳು ಬಹುಮುಖ ಪ್ರತಿಭಾವಂತರಾಗುವಂತೆ ಮಾಡುವುದಲ್ಲದೇ ಶೇ. ೧೦೦ರಷ್ಟು ಫಲಿತಾಂಶದ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಶರೀರ, ಮನಸು, ಬುದ್ಧಿ, ಹೃದಯ, ಆತ್ಮ ಎಲ್ಲವುಗಳಲ್ಲೂ ಹುದುಗಿರುವ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸಿ ಶಿಸ್ತುಬದ್ದ ಜೀವನಕ್ಕೆ ಮುಡಿಪಾದ ಆದರ್ಶ ನಾಗರಿಕರನ್ನು ರೂಪಿಸುವುದು ಇಲ್ಲಿನ ವೈಶಿಷ್ಟ್ಯ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆಯಲ್ಲಿ ಅಧ್ಯಯನ. ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ವಿಶೇಷ ತರಬೇತಿ ನೀಡುವುದು. ಸ್ವಾವಲಂಬನದ ಸ್ವಯಂ- ಉದ್ಯೋಗಕ್ಕೆ ಭದ್ರವಾದ ತಳಪಾಯ ಹಾಕುವುದು. ತೋಟಗಾರಿಕೆ, ಹೈನುಗಾರಿಕೆ, ಸಾವಯವ ಕೃಷಿ, ಮಿಶ್ರ ಬೆಳೆಗಳ ತರಬೇತಿ ನೀಡುವುದು. ಸಹಕಾರಿ ಸಂಘವನ್ನು ಮಕ್ಕಳೇ ನಡಸಿ ಪ್ರತ್ಯಕ್ಷವಾದ ಅನುಭವ ಪಡೆಯುವುದು. ಮನೆವಾರ್ತೆ ನಿರ್ವಹಣೆ, ಕೃಷಿ, ಹಾಲಿನ ಲೆಕ್ಕಪತ್ರ, ಪ್ರಥಮ ಚಿಕಿತ್ಸೆ ಮತ್ತು ಆಡಳಿತ ತರಬೇತಿಗಳನ್ನು ನೀಡಲಾಗುತ್ತದೆ. ಸದೃಢ ಶರೀರದಲ್ಲಿ ಸದೃಢ ಮನಸ್ಸು ನೆಲೆಗೊಳ್ಳಲೆಂದು ಪ್ರತಿ ದಿನವೂ ಯೋಗ, ಧ್ಯಾನ, ಪ್ರಾರ್ಥನೆ, ಭಜನೆಗಳ ಆಯೋಜನೆಯಿದೆ. ಆಟೋಟಗಳಲ್ಲಿ ಆಸಕ್ತಿ ಕುದುರುವಂತೆ ವಿಶೇಷ ಪ್ರಶಿಕ್ಷಣ ವ್ಯವಸ್ಥೆಯಿದೆ. ಕಲೆ ಮತ್ತು ಕರಕುಶಲ ವೃತ್ತಿಗಳಲ್ಲಿ ಅಭಿರುಚಿ ಮೂಡುವಂತೆ ಮಾಡುವ ತರಬೇತಿಯ ಮೂಲಕ ಸೃಜನಶೀಲತೆಗೆ ನೀರೆರೆಯಲಾಗುತ್ತಿದೆ. ಶಾಲೆಯಲ್ಲಿ ಎನ್.ಸಿ.ಸಿ ಯ ಆರ್ಮಿ ಮತ್ತು ನೇವಲ್ ವಿಭಾಗದ ತರಭೇತಿಯ ಮೂಲಕ ಶಿಸ್ತುಬದ್ಧ ಜೀವನಕ್ಕೆ ತಯಾರಿ ನಡೆಸಲಾಗುತ್ತದೆ. ಪೇಟೆಯ ಗಲಿಬಿಲಿ-ಗೊಂದಲ-ಅಶಿಸ್ತುಗಳಿಂದ ದೂರವಾದ ಪ್ರಶಾಂತ ವಾತಾವರಣದಲ್ಲಿ ಪರಸ್ಪರ ಸಾಮರಸ್ಯ, ಐಕ್ಯಮತ, ವಿಶ್ವಾಸ. ನಂಬಿಕೆಯಂತಹ ಆದರ್ಶ ಮಾನವೀಯ ಮೌಲ್ಯಗಳೇ ಇಲ್ಲಿ ಮೂಲಾಧಾರ. == ಮೂಲಭೂತ ಚಟುವಟಿಕೆಗಳು == ಶೈಕ್ಷಣಿಕ ಪ್ರವಾಸಗಳ ಮೂಲಕ ಅನುಭವಗಳ ಆಯಾಮದ ವಿಸ್ತಾರ. ತಾಲೂಕು ಕಛೇರಿ, ಪೊಲೀಸು ಠಾಣೆ, ಅಂಚೆ ಕಛೇರಿ, ನ್ಯಾಯಾಲಯ- ಇತ್ಯಾದಿಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯ ವಿಧಾನಗಳ ಪರಿಚಯ ಮಾಡಿಕೊಳ್ಳುವುದು. ಪ್ರತಿ ವಿದ್ಯಾರ್ಥಿಗೂ ಬ್ಯಾಂಕಿನಲ್ಲಿ ಒಂದು ಉಳಿತಾಯ ಖಾತೆಯನ್ನು ತೆರೆದು, ಬ್ಯಾಂಕಿಂಗ್ ವ್ಯವಹಾರ ಅನುಭವ ಪಡೆಯುವುದು.